ಶುಕ್ರವಾರ ಸೆಪ್ಟಂಬರ್ 17ರಂದು ರೇಡಿಯೋ ಸಂಜೆಯಲ್ಲಿ ಬೀಚ್ ಅಭಿವೃದ್ಧಿ ಯೋಜನೆಯ ರೂವಾರಿ ಹಾಗೂ ಸಂಘಟಕ ಯತೀಶ್ ಬೈಕಂಪಾಡಿ ಭಾಗವಹಿಸಿದರು. ಒಂದು ತಾಸಿನ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿಗೂ ಕೂಡ ಬೀಚ್ ಅನ್ನು ನೋಡದ ಸುಮಾರು 90 ಶೇಕಡಾದಷ್ಟು ಜನ ನಮ್ಮ ಜಿಲ್ಲೆಯಲ್ಲಿದ್ದಾರೆ. ಇವರನ್ನು ಬೀಚ್’ನತ್ತ ಸೆಳೆಯುವಂತಹ ಪ್ರಯತ್ನವಾಗಬೇಕು. ಅದರ ಜೊತೆಗೆ ಪ್ರವಾಸೋದ್ಯಮ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ಕೂಡಾ ನಾಗರಿಕರಿಗಿದೆ ಎಂದು ಹೇಳಿದರು.
ಬೀಚ್ ಉತ್ಸವಗಳನ್ನು ಸಂಘಟಿಸುವುದರ ಮೂಲಕ ಪ್ರವಾಸಿಗರಿಗೆ ಒಂದು ಹೊಸ ಅನುಭವವನ್ನು ನೀಡುವುದರ ಜೊತೆಗೆ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮೂಲಕ ಸ್ವಾವಲಂಬಿ ಬೀಚ್’ಗಳನ್ನು ರೂಪಿಸಿದ ಯಶಸ್ವಿ ಪ್ರಯತ್ನದ ಹಿಂದಿನ ಅನುಭವಗಳನ್ನು ಯತೀಶ್ ಬೈಕಂಪಾಡಿ ಹಂಚಿಕೊಂಡರು.
ಬೀಚ್’ಗಳಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಶಿಷ್ಟಾಚಾರ, ಜಾಹೀರಾತುಗಳಿಗೆ ಮರುಳು ಹೋಗಿ ಅದನ್ನು ಅನುಕರಿಸುವ ಯುವಸಮುದಾಯದ ಮಾನಸಿಕತೆಯ ಬಗೆಗೆ ವಿಚಾರಗಳನ್ನು ಹರಿಬಿಟ್ಟರು.
ಕೇಳುಗರ ಪ್ರಶ್ನೆಗಳಿಗೆ ಸಮರ್ಪಕ ಉತ್ತರದ ಜೊತೆಗೆ, ನಾವು ಸಮುದ್ರ ಕಿನಾರೆಗಳನ್ನು ಅಕ್ರಮಿಸಿದ್ದೇವೆಯೇ ಹೊರತು ಬೀಚ್’ಗಳು ನಮ್ಮ ಬಳಿ ಬಂದಿಲ್ಲ ಎಂದು ಯತೀಶ್ ಬೈಕಂಪಾಡಿ ಅಭಿಪ್ರಾಯಪಟ್ಟರು.
ಸಂತ ಅಲೋಶಿಯಸ್ ಇನ್ಸಿಟ್ಯೂಟ್ ಅಫ್ ಮ್ಯಾನೇಜ್ ಮೆಂಟ್ ಮತ್ತು ಇನ್ಫ಼ೊರ್ಮೇಶನ್ ಟೆಕ್ನೋಲಜಿಯ ಪ್ರಾಧ್ಯಾಪಕರಾದ ಡಾ. ರೂಬನ್ ಉಪಸ್ಥಿತರಿದ್ದರು. STRIDE ಪ್ರಾಜೆಕ್ಟ್ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಪ್ರಸಾರವಾಯಿತು. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.
- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್