ಜೀವರಕ್ಷಕ ವಿಧಾನಗಳ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ

ರೇಡಿಯೋ ಸಾರಂಗ್ 107.8 ಎಫ್. ಎಂ. ಮಂಗಳೂರು ಹಾಗೂ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ರಿ.) ಕ್ಷೇತ್ರ ಸಮಿತಿ ಮಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಗೋರಿಗುಡ್ಡೆಯ ಟೈಲರ್ಸ್ ಭವನದಲ್ಲಿ ಜೀವರಕ್ಷಕ ವಿಧಾನಗಳ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ, ಖ್ಯಾತ ಮೂಳೆ ತಜ್ಞರಾದ ಡಾ. ಸುಧಾಕರ್ ಹಾಗೂ ಕೆಎಂಸಿ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ. ರಂಜನ್ ಇವರು ಜೀವರಕ್ಷಕ ವಿಧಾನಗಳ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಅಪಘಾತ ಅಥವಾ ಜೀವಹಾನಿ ಅಂತಹ ಅನೇಕ ಪ್ರಕರಣಗಳಲ್ಲಿ ವ್ಯಕ್ತಿಯ ಜೀವವುಳಿಸುವುದು ಹೇಗೆ ಎಂಬುದರ ಅರಿವು ನಮಗಿರುವುದಿಲ್ಲ. ಆದರೆ ಜೀವ ರಕ್ಷಣೆಯಂತಹ ವಿಧಾನಗಳನ್ನು ತಿಳಿದುಕೊಂಡಾಗ ಒಬ್ಬ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಿರುತ್ತದೆ. ಇದಕ್ಕಾಗಿ ಜೀವರಕ್ಷಣೆಯ ಏಳು ಸುಲಭ ವಿಧಾನಗಳನ್ನು ತಿಳಿದುಕೊಳ್ಳುವುದು ತುಂಬಾ ಪ್ರಮುಖವಾಗುತ್ತದೆ, ಎಂದು ಡಾ. ಸುಧಾಕರ್ ನುಡಿದರು. ಈ ವಿಧಾನಗಳ ಕುರಿತು ಡಾಕ್ಟರ್ ಸುಧಾಕರ್ ಅವರು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಡಾ. ರಂಜನ್ ಅವರು ಕಾರ್ಡಿಯಾಕ್ ಅರೆಸ್ಟ್ ಆಗುವಂತಹ ಸಂದರ್ಭದಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೇಡಿಯೋ ಸಾರಂಗ್ ನಿರ್ದೇಶಕರಾದ ಡಾ. ಫಾ. ಮೆಲ್ವಿನ್ ಪಿಂಟೊ ಎಸ್. ಜೆ., ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ನ ರಾಜ್ಯಾಧ್ಯಕ್ಷರಾದ ನಾರಾಯಣ, ಹಾಗೂ ವೀಣಾ ಶೆಟ್ಟಿ ಉಪಸ್ಥಿತರಿದ್ದರು.

- ಶ್ವೇತಾ ಇಂದಾಜೆ, ರೇಡಿಯೋ ಸಾರಂಗ್