Ganesh Amin Sankamar: ಶ್ರೀನಾರಾಯಣಗುರು ಮನುಷ್ಯ ಧರ್ಮದ ಪ್ರತಿಪಾದಕ

'ಮನುಷ್ಯ ಧರ್ಮದ ಪ್ರತಿಪಾದಕ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀನಾರಾಯಣಗುರು' ಎಂದು ತುಳು ಜನಪದ ವಿದ್ವಾಂಸರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇಲ್ಲಿನ ಶ್ರೀನಾರಾಯಣಗುರು ಅಧ್ಯಯನಪೀಠದ ನಿರ್ದೇಶಕರಾದ ಡಾ.ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು. ಇವರು ಸೆಪ್ಟೆಂಬರ್ 11 ಶನಿವಾರದ ತುಳು-ಚಾವಡಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ರಹ್ಮಶ್ರೀ ನಾರಾಯಣ ಗುರು ಇವರ 168ನೇ ಜನ್ಮದಿನೋತ್ಸವದ ಪ್ರಯುಕ್ತ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಂದು ಕೇರಳದಲ್ಲಿ ಇದ್ದ ಜಾತಿ ವ್ಯವಸ್ಥೆ ಮೇಲು ಕೀಳೆಂಬ ತಾರತಮ್ಯ ಇದನ್ನೆಲ್ಲ ಗಮನಿಸಿದ ಸ್ವಾಮಿ ವಿವೇಕಾನಂದರು ಲೋಕ ಸಂಚರಿಸುತ್ತ 'ಈ ವ್ಯವಸ್ಥೆಯನ್ನು ಸರಿಪಡಿಸಬೇಕಾದರೆ ದೇವರೇ ಮತ್ತೊಮ್ಮೆ ಹುಟ್ಟಿ ಬರಬೇಕು', ಎಂದು ತಿಳಿಸಿದರಂತೆ. ಅದರಂತೆ 30 ವರುಷಗಳ ನಂತರ ಸ್ವಾಮಿ ವಿವೇಕಾನಂದರು ಅಲ್ಲಿಗೆ ಭೇಟಿ ಇತ್ತ ಸಂದರ್ಭ ಅಲ್ಲಿ ಆದ ಬದಲಾವಣೆಗಳಿಂದ ಅವರಿಗೆ ತಿಳಿಯಿತು ಈ ಕೆಲಸ ನಾರಾಯಣಗುರು ಮಾಡಿರಬಹುದು ಎಂದು.  

ಈ ವಿಷಯದ ಬಗ್ಗೆ ಮಾತನ್ನು ಮುಂದುವರಿಸುತ್ತಾ ಅಲ್ಲಿ ಹಲವಾರು ಚಿತ್ರ-ವಿಚಿತ್ರ ತೆರಿಗೆ ಪದ್ಧತಿಗಳು ಇದ್ದವು.  ಮುಖ್ಯವಾಗಿ ದೇವದಾಸಿ ಪದ್ಧತಿ, ಪಾಂಡವರ್, ಮುಂಡುಕೊಡು ಎಂಬ ಪದ್ದತಿ ಹಾಗೂ 16 ರಿಂದ 60 ವರ್ಷದವರೆಗಿನ ಗಂಡಸರಿಗೆ ವಿಶೇಷ ತೆರಿಗೆ ವ್ಯವಸ್ಥೆಗಳು ಇದ್ದವು. ಮದುವೆಯ ತೆರಿಗೆ, ವೃತ್ತಿ ತೆರಿಗೆ, ಸತ್ತ ನಂತರ ಮರಣ ತೆರಿಗೆ ಮತ್ತು ತಾಯಿಯು ಮಗುವಿಗೆ ಹಾಲುಣಿಸವ ತೆರಿಗೆ, ಹೀಗೆ ಕೆಳಜಾತಿಯವರಿಗೆ ವಿಚಿತ್ರ ತೆರಿಗೆ ವ್ಯವಸ್ಥೆಗಳು ಇದ್ದವು. ಈ ರೀತಿಯ ವ್ಯವಸ್ಥೆಯನ್ನು ಕಂಡು ನಾರಾಯಣಗುರು ಪ್ರಶ್ನೆ ಮಾಡಿದ ಸಂದರ್ಭ ಅವರನ್ನು ಮೇಲ್ವರ್ಗದವರು ವಿರೋಧಿಸಲು ಪ್ರಾರಂಭಿಸಿದರು, ಎಂದು ಡಾ. ಅಮೀನ್ ತಿಳಿಸಿದರು. 

ಈ ರೀತಿಯ ಶೋಷಣೆಯನ್ನು ನೋಡಲಾಗದೆ ಗುರುಗಳು ಹಲವಾರು ಕ್ರಿಯಾತ್ಮಕ ಕೆಲಸ ಮಾಡುವ ಯೋಚನೆ ಮಾಡಿ ಧಾರ್ಮಿಕವಾಗಿ ಜನರನ್ನು ಒಟ್ಟು ಮಾಡುವ ಕೆಲಸ ಮಾಡುತ್ತಾರೆ. ಆ ಮೂಲಕ ಜನರನ್ನು ದೇವಸ್ಥಾನದ ಪ್ರವೇಶಕ್ಕೆ ಬರಿಸುತ್ತಾರೆ. ಇದನ್ನು ಮೇಲ್ವರ್ಗದವರು ವಿರೋಧಪಡಿಸಿದ ಹಿನ್ನೆಲೆ ಈಳವ ಶಿವನನ್ನು ಸ್ಥಾಪಿಸಲು ಮುಂದಾಗುತ್ತಾರೆ ಮತ್ತು ನಾರಾಯಣಗುರು ಮೊದಲ ದೇವಸ್ಥಾನವನ್ನು ಕೇರಳದ ಅರವಿಪುರದಲ್ಲಿ ಸ್ಥಾಪಿಸುತ್ತಾರೆ, ಎಂದು ತಿಳಿಸಿದರು.

ಅವರು ಶಿಕ್ಷಣಕ್ಕೂ ಮಹತ್ವ ನೀಡುತ್ತಾ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲು ಮುಂದಾದರು ಮತ್ತು ದೇವಸ್ಥಾನವನ್ನು ಸ್ಥಾಪಿಸುವುದನ್ನು ನಿಲ್ಲಿಸಿ ಇನ್ನು ಹೆಚ್ಚು ಹೆಚ್ಚು ವಿದ್ಯಾಲಯಗಳನ್ನು ಸ್ಥಾಪಿಸಿ, ಎಂದು ಕರೆ ನೀಡಿದ್ದರು ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು, ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

'ನಾರಾಯಣಗುರು ಇಂದು ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತರಲ್ಲ, ಅವರು ವಿಶ್ವವ್ಯಾಪಿಯಾದವರು,' ಎನ್ನುತ್ತಾ ಅವರ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಈ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದರು. ಡಾ. ಅಮೀನ್ ಹಲವಾರು ಕೇಳುಗರ ಕರೆಗಳಿಗೆ ಉತ್ತಮವಾಗಿ ಸ್ಪಂದಿಸಿದರು.
 
- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್